Saturday, October 3, 2009

ದಿವಾಕರತನುಜಂ

ದಿವಾಕರತನುಜಂ

ರಾಗ: ಯದುಕುಲಕಾಂಭೋಜಿ
ತಾಳ: ಏಕತಾಳ

ಪಲ್ಲವಿ:
||ದಿವಾಕರತನುಜಂ ಶನೈಶ್ಚರಂ||
||ಧೀರತರಂ ಸಂತತಂ ಚಿಂತಯೇಹಂ||

ಅನುಪಲ್ಲವಿ:
||ಭವಾಂಬುನಿಧೌನಿ ಮಗ್ನ ಜನಾನಾಂ, ಭಯಂಕರಂ ಅತಿಕ್ರೂರಫಲದಂ||
||ನೀಲಾಂಶುಕ ಪುಷ್ಪಮಾಲಾವೃತಂ ನೀಲರತ್ನ ಭೂಷಣಾಲಂಕೃತಂ||


ಚರಣ: 
||ಕಾಲಾಂಜನ ಕಾಂತೆಯುಕ್ತದೇಹಂ ಕಾಲಸಹೋದರಂ ಕಾಕವಾಹನಂ||
||ನೀಲಾಂಕುಶ ಪುಷ್ಪಮಾಲಾವೃತಂ ನೀಲರತ್ನ ಭೂಷಣಾಲಂಕೃತಂ||
||ಮಾಲಿನೀ ವಿನುತ ಗುರುಗುಹಮುದಿತಂ ಮಕರ ಕುಂಭರಾಶಿನಾಥಂ||
||ತಿಲತೈಲ ಮಿಶ್ರಿತಾನ್ನ ದೀಪಪ್ರಿಯಂ ದಯಾಸುಧಾಸಾಗರಂ ನಿರ್ಭಯಂ||
||ಕಾಲದಂಡ ಪರಿಪೀಡಿತ ಜಾನುಂ ಕಾಮಿತಾರ್ಥಫಲದ ಕಾಮಧೇನುಂ||
||ಕಾಲಚಕ್ರ ಭೇಧ ಚಿತ್ರಭಾನುಂ ಕುಲ್ಪಿತಚ್ಛಾಯಾದೇವಿ ಸುತಂ||

ತಾತ್ಪರ್ಯ:
ಸೂರ್ಯಪುತ್ರನೂ, ಧೀರನೂ, ಆದ ಶನೀಶ್ಚರನನ್ನು ಸತತ ಧ್ಯಾನ ಮಾಡುವೆ. ಸಂಸಾರ ಸಾಗರದಲ್ಲಿ ಮುಳುಗುವವರಿಗೆ ಭಯಂಕರನೂ, ಕ್ರೂರವಾದ ಫಲಗಳನ್ನು ಕೊಡುವವನೂ ಆದ ನೀನು, ಹೇ! ಶನೀಶ್ಚರ! ದೇವರ ಕಟಾಕ್ಷಕ್ಕೆ ಬಿದ್ದ ಭಕ್ತರ ಪಾಲಿಗೆ ಶುಭಫಲಗಳನ್ನು ಕೊಡುವವನಾಗಿದ್ದೀಯೆ! ನಿನ್ನನ್ನು ಸದಾ ಧ್ಯಾನಿಸುವೆ.

ಕಾಡಿಗೆಯಂತೆ ಕಪ್ಪಾದ ದೇಹವುಳ್ಳವನು ನೀನು. ಯಮಧರ್ಮನ ಸಹೋದರ. ಕಾಕವಾಹನ. ನೀಲಿಬಣ್ಣದ ವಸ್ತ್ರ ಉಟ್ಟು ಪುಷ್ಪಗಳಿಂದ ಆವೃತನಾಗಿರುವೆ. ರತ್ನಾಭರಣ ಭೂಷಿತನಾಗಿರುವೆ. ಮಾಲಿನಿಯಿಂದ ಸ್ತುತಿಸಲ್ಪಡುವವನೂ, ಗುರುಗುಹ ಸಂತೋಷನೂ ಆಗಿರುವೆ. ಮಕರ ಕುಂಭ ರಾಶಿಗಳಿಗೆ ಒಡೆಯ ನೀನು. ಎಳ್ಳೆಣ್ಣೆಯ ದೀಪ ಮತ್ತು ಅನ್ನ ನಿನಗೆ ಪ್ರಿಯ. ದಯಾಸಾಗರನಾದ ಭಗವನ್! ಸದಾ ನಿನ್ನ ಧ್ಯಾನವೇ ನನಗೆ. ಯಮದಂಡದಿಂದ ಗಾಯಗೊಂಡ ಮಂಡಿಯುಳ್ಳವನೂ, ಇಷ್ಟಾರ್ಥಗಳನ್ನು ಕರುಣಿಸುವ ಕಾಮಧೇನುವೂ ಆಗಿರುವೆ. ಕಾಲಚಕ್ರವನ್ನು ಭೇದಿಸಿವ ಸೂರ್ಯ-ಛಾಯಾದೇವಿಯರ ಸುತನೂ ಆದ ಶನೀಶ್ಚರ! ನಿನ್ನನ್ನು ಸದಾ ಧ್ಯಾನ ಮಾಡುವೆ.

ಯದುಕುಲಕಾಂಭೋಜಿ ರಾಗ ಲಕ್ಷಣ
ಆರೋಹಣ: ಸ ರಿ ಮ ಪ ಧ ಸ
ಅವರೋಹಣ: ಸ ನಿ ಧ ಪ ಮ ಗ ರಿ ಸ

ಈ ರಾಗವು ೨೮ನೇ‌ಮೇಳ ಹರಿಕಾಂಭೋಜಿಯಲ್ಲಿ ಜನ್ಯ. ಈ ರಾಗದಲ್ಲಿ ಷಡ್ಜ-ಪಂಚಮಗಳೊಂದಿಗೆ ಬರುವ ಸ್ವರಸ್ಥಾನಗಳು: ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ಧೈವತ ಮತ್ತು ಕೈಶಿಕಿ ನಷಾದ. ಕಾಂಭೋಜಿ ರಾಗದಂತೆ ಈ ರಾಗದಲ್ಲಿ ಕೂಡ ಕೆಲವು ಪ್ರಯೋಗಗಳಲ್ಲಿ ಕಾಕಲಿ ನಿಷಾದವು ಬರುತ್ತದೆ. ಔಡವ ಸಂಪೂರ್ಣರಾಗ. ಭಾಷಾಂಗ ರಾಗ. ಕಾಕಲಿ ನಿಷಾದ ಅನ್ಯಸ್ವರ. ಸಾ ನಿ ಪಾ ಧ ಸಾ ಎಂಬ ಪ್ರಯೋಗದಲ್ಲಿ ಕಾಕಲಿ ನಿಷಾದವು ಬರುತ್ತದೆ. ಸಾ ಪ ಧಾ ಸಾ - ಸ ರಿ ಗ ಮ ಸಾ - ಸ ರಿ ಮಾ ಮಾ - ಗ ಮ ಪಾ ಪಾ - ಮ ಪ ಧಾ ಧಾ - ಮಾ ಪ ಧ ಸಾ - ಮುಂತಾದ ಪ್ರಯೋಗಗಳು ರಂಜಕವಾಗಿರುತ್ತದೆ. ತುಂಬಾ ಅನುಭವಸ್ಥರಿಂದ ಕೇಳಬೇಕು. ಯಾವಾಗಲೂ ಹಾಡಬಹುದು. ಆದರೂ ರಾತ್ರಿ ಹಾಡುವುದಕ್ಕೆ ತುಂಬಾ ರಂಜನೆಯುಳ್ಳದ್ದಾಗಿರುತ್ತದೆ. ಭಕ್ತಿ ಮತ್ತು ಕರುಣಾ ರಸ ಪ್ರಧಾನ ರಾಗ.

Friday, October 2, 2009

ಶ್ರೀ ಶುಕ್ರಭಗವಂತಂ

ಶ್ರೀ ಶುಕ್ರಭಗವಂತಂ

ರಾಗ: ಘರಜ್
ತಾಳ: ಅಟತಾಳ

ಪಲ್ಲವಿ:
||ಶ್ರೀಶುಕ್ರ ಭಗವಂತಂ ಚಿಂತಯಾಮಿ||
|| ಸಂತತಂ ಸಕಲ ತತ್ವಜ್ಞಂ||

ಅನುಪಲ್ಲವಿ:
||ಹೇ ಶುಕ್ರಭಗವನ್ ಮಾಂ ಆಶು ಪಾಲಯ, ವೃಷ ತುಲಾಧೀಶ ದೈತ್ಯ||‌
||ಹಿತೋಪದೇಶ, ಕೇಶವಕಟಾಕ್ಷೈಕನೇತ್ರಂ ಕಿರೀಟಧರಂ ಧವಳಗಾತ್ರಂ||

ಚರಣ:
||ವಿಂಶತಿ ವತ್ಸರೋಡುದಶಾವಿಭಾಗಮಷ್ಟವರ್ಗಂ||
||ಕವಿಂ ಕಳತ್ರಕಾರಕಂ ರವಿನಿರ್ಜರ ಗುರುವೈರಿಣಂ||
||ನವಾಂಶ ಹೋರಾದ್ರೇಕ್ಕಾಣಾದಿ ವರ್ಗೋತ್ತಮಾವಸರಸಮಯೇ||
||ವಕ್ರೋಚ್ಚನೀಚ ಸ್ವಕ್ಷೇತ್ರವರಕೇಂದ್ರ ಮೂಲತ್ರಿಕೋಣೇ||
||ತ್ರಿಂಶಾಂಶಷಷ್ಟ್ಯಾಂಶೈರಾವತಾಂಶ ಪಾರಿಜಾತಾಂಶ ಗೋಪುರಾಂಶ||
||ರಾಜಯೋಗಕಾರಕಂ ರಾಜ್ಯಪ್ರದಂ ಗುರುಗುಹಮುದಂ||

ತಾತ್ಪರ್ಯ:
ಸಕಲ ತತ್ವಜ್ಞನಾದ ಶ್ರೀ ಶುಕ್ರಭಗವಂತನನ್ನು ಸದಾ ಧ್ಯಾನಿಸುವೆ. ಹೇ! ವೃಷಭ ತುಲಾರಾಶಿಗಳ ಅಧಿಪನೇ! ಅಸುರಾಚಾರ್ಯನೇ! ಶುಕ್ರಾಚಾರ್ಯನೇ ನನ್ನನ್ನು ರಕ್ಷಿಸು.

ಭಗವಂತನ ಕೃಪಾದೃಷ್ಟಿಗೆ ಪಾತ್ರನಾದವನೂ, ಒಂದೇ ಕಣ್ಣುಳ್ಳವನೂ, ಕಿರೀಟಧಾರಿಯೂ ಬಿಳುಪಾದ ಬಣ್ಣವುಳ್ಳವನೂ, ಆದ ನೀನು ನನ್ನನ್ನು ಕಾಪಾಡು. ಹೇ‌ಭಗವನ್! ನೀನು ಉಡುದೆಶೆಯಲ್ಲಿ ಇಪ್ಪತ್ತು ವರ್ಷ ದಶಾಕಾಲವನ್ನು ಹೊಂದಿರುವೆ. ಅಷ್ಟವರ್ಗವುಳ್ಳವನೂ, ಕ್ರಾಂತಿದರ್ಶಿಯೂ ಆಗಿರುವೆ. ಪತ್ನಿಕಾರಕ ನೀನು. ಸೂರ್ಯ, ಗುರು ಗ್ರಹಗಳಿಗೆ ಶತ್ರು. ನವಾಂಶ, ಹೋರಾ, ದ್ರೇಕ್ಕಾಣ ಮೊದಲಾದ ವರ್ಗೋತ್ತಮ ಕಾಲದಲ್ಲಿ ವಕ್ರ, ಉಚ್ಚ, ನೀಚಸ್ಥಿತಿ, ಸ್ವಕ್ಷೇತ್ರ, ಕೇಂದ್ರ, ಮೂಲತ್ರಿಕೋನಗಳಲ್ಲಿ ತ್ರಿಂಶಾಂಶ, ಷಷ್ಟ್ಯಂಶ, ಐರಾವತಾಂಶ, ಪಾರಿಜಾತಾಂಶ, ಗೋಪ್ರರಾಂಶಗಳಿಂದ ರಾಜಯೋಗವನ್ನುಂಟು ಮಾಡುವ, ರಾಜ್ಯದಾಯಕನೂ, ಗುರುಗುಹನಿಗೆ ಸಂತಸವನ್ನೀಯುವ ಹ್R ಭಗವನ್! ಕಾಪಾಡು!

ಘರಜ್ ರಾಗ ಲಕ್ಷಣ:
ಆರೋಹಣ: ಸ ರಿ ಗ ಮ ಧ ನಿ ಸ
ಅವರೋಹಣ: ಸ ನಿ ಧ ಪ ಮ ಗ ರಿ ಸ

ಘರಜ್ ರಾಗವು ೧೫ನೇ ಮೇಳರಾಗದಲ್ಲಿ ಜನ್ಯ. ಉಪಾಂಗ, ದೇಶೀಯ, ರಕ್ತಿರಾಗ. ಷಾಡವ ಸಂಪೂರ್ಣರಾಗ. ಗಾಂಧಾರ, ಮಧ್ಯಮ, ಜೀವಸ್ವರಗಳು. ಗಾಂಧಾರ ನ್ಯಾಸಸ್ವರ. ಸ ಗಾ ಮ ಪ ಮ ಧ ನಿ ಸ - ಸ ನಿ ಧ ಪ ಮ - ಮ ನಿ ಧ ಪ ಮ ಗ ಮ ಪ - ಸ* ನಿ ಧ ಪ ಮ ಪ ಗ ಮ - ಮ ನಿ ಧ ಮ ಗ ರಿ ಗ ಮ - ಧಾ ಧ ನಿ ಸ* ರಿ* ಸ* - ನಿ ಗ* ರಿ* ಸ* - ನಿ ಸ* ನಿ ಧ ಸ* - ಧ ಸ* ನಿ ಧ ಪ ಮ ಪ ಗ ಗ ಮ ನಿ ಧ ಮ ಗಾ ರಿ - ಮುಂತಾದ ಪ್ರಯೋಗಗಳು ರಂಜಕವಾಗಿರುತ್ತದೆ. ಈ ರಾಗದಲ್ಲಿ ಅನೇಕ ಜಾವಳಿಗಳು ಮತ್ತಿ ತಿಲ್ಲಾನಗಳಿವೆ. ಕೇಳಿ ಅನುಭವದಿಂದ ಕಲಿಯಬೇಕಾದ ರಾಗ. ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಷಡ್ಜ, ಶುದ್ಧ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪಂಚಮ, ಶುದ್ಧ ಧೈವತ, ಕಾಕಲಿ ನಿಷಾದ.

Thursday, October 1, 2009

ಬೃಹಸ್ಪತೇ

ಬೃಹಸ್ಪತೇ

ರಾಗ: ಅಠಾಣ.
ತಾಳ: ತ್ರಿಪುಟತಾಳ (ತ್ರಿಶ್ರಜಾತಿ)

ಪಲ್ಲವಿ:
||ಬೃಹಸ್ಪತೇ ತಾರಾಪತೇ ಬ್ರಹ್ಮಜಾತೇ ನಮೋಸ್ತುತೇ||

ಅನುಪಲ್ಲವಿ:
||ಮಹಾಬಲವಿಭೋ ಗೀಷ್ಪತೇ ಮಂಜುಧನುರ್ಮೀನಾಧಿಪತೇ||
||ಮಹೇಂದ್ರಾದ್ಯುಪಾಸಿತಾಕೃತೇ ಮಾಧವಾದಿವಿನುತಧೀಮತೇ||

ಚರಣ:
||ಸುರಾಚಾರ್ಯವರ್ಯ ವಜ್ರಧರ, ಶುಭಲಕ್ಷಣ ಜಗತ್ರಯಗುರೋ||‌
||ಜರಾದಿ ವರ್ಜಿತಕ್ರೋಧ, ಕಚಜನಕಾಶೃತಜನಕಲ್ಪತರೋ||
||ಪುರಾರಿಗುರುಗುಹ ಸಮ್ಮೋದಿತ, ಪುತ್ರಕಾರಕ ದೀನಬಂಧೋ||
||ಪರಾದಿ ಚತ್ವಾರಿವಾ ಕ್ಸ್ವ ರೂಪಪ್ರಕಾಶಕ ದಯಾಸಿಂಧೋ||
||ನಿರಾಮಯಾಯ ನೀತಿಕರ್ತ್ರೇ, ನಿರಂಕುಶಾಯ ವಿಶ್ವಭರ್ತ್ರೇ||‌
||ನಿರಂಜನಾಯ ಭುವನಭೋಕ್ತ್ರೇ, ನಿರಂಶಾಯ ಸುಖಪ್ರದಾತ್ರೇ||‌

ತಾತ್ಪರ್ಯ:
ನಕ್ಷತ್ರಾಧಿಪನೇ! ಬ್ರಹ್ಮಕುಲಜನಾದ ಬೃಹಸ್ಪತಿಯೇ!‌ನಿನಗೆ ನಮಸ್ಕಾರ! ನೀನು ಮಹಾಬಲಿಷ್ಟನೂ ಸರ್ವ ಶೇಷ್ಠನೂ, ಧನಸ್ಸು ಮತ್ತು ಮೀನರಾಶಿಗಳ ಅಧಿಪತಿಯೂ ಆಗಿದ್ದೀಯೆ. ಇಂದ್ರಾದಿಗಳು ನಿನ್ನನ್ನು ಪೂಜಿಸುತ್ತಾರೆ. ವಿಷ್ಣುವೇ‌ಮೊದಲಾದ ದೇವರುಗಳು ನಿನ್ನನ್ನು ಸ್ತುತಿಸುತ್ತಾರೆ. ಮಹಾ ಪ್ರಾಜ್ಞನಾದ ನಿನ್ನನ್ನು ನಮಸ್ಕರಿಸುತ್ತಾರೆ.

ಸುರಗುವಾದ ನೀನು ಸರ್ವಲಕ್ಷಣ ಸಂಪನ್ನನಿರುವೆ. ತ್ರಿಲೋಕಗಳಿಗೆ ಗುರುವೂ, ಮುಪ್ಪು, ಮರಣವಿಲ್ಲದವನೂ ಆಗಿರುವೆ. ಕ್ರೋಧರಹಿತನೂ, ಕಚನ ತಂದೆಯೂ, ಆಶ್ರಿತ ಜನರಿಗೆ ಕಲ್ಪವೃಕ್ಷದಂತೆಯೂ ಆಗಿರುವೆ. ಶಿವಗುರುಗುಹರ ಸಂತೋಷಕ್ಕೆ ಪಾತ್ರನಾಗಿರುವೆ. ಪುತ್ರಭಾಗ್ಯವನ್ನು ಕರುಣಿಸುವೆ ನೀನು. ಚತುರ್ವಿಧವಾಕ್ಪ್ರವಾಹನೂ, ಪ್ರಕಾಶಪಡಿಸಿದವನೂ, ಅನಾಥರಕ್ಷಕನೂ, ದಯಾಸಾಗರನೂ, ಆದ ನಿನಗೆ ನಮಸ್ಕರಿಸುವೆ. ರೋಗರಹಿತನೂ, ನೀತಿಬೋಧಕನೂ, ಸ್ವತಂತ್ರನೂ ಆಗಿರುವೆ. ದೋಷರಹಿತನೂ, ವಿಶ್ವದ ನಾಯಕನೂ, ಲೋಕರಕ್ಷಕನೂ ಆಗಿರುವೆ. ಪೂರ್ಣನೂ ಯಜ್ಞರಕ್ಷಕನೂ ಆಗಿರುವ ಬೃಹಸ್ಪತಿಯೇ! ನಿನಗೆ ನಮೋನಮಃ

ಅಠಾಣ ರಾಗಲಕ್ಷಣ
ಆರೋಹಣ: ಸ ರಿ ಮ ಪ ನಿ ಪ ಧ ನಿ ಸ
ಅವರೋಹಣ: ಸ ನಿ ಸ ಧಾ ಪ ಮ ಪ ಗಾ ರಿ ಸ

ಈ ರಾಗಕ್ಕೆ ಆರೋಹಣ ಅವರೋಹಣಗಳು ಒಂದೇ ವಿಧವಾಗಿಲ್ಲ ಮತ್ತು ೨೯ನೇ‌ಮೇಳಕರ್ತ ರಾಗದ ಜನ್ಯವೆಂದೆ ಕೆಲವರೂ, ೨೮ನೇ ಮೇಳದಲ್ಲಿ ಜನ್ಯವೆಂದು ಕೆಲವರೂ ಅಭಿಪ್ರಾಯ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಈ ರಾಗದಲ್ಲಿ ಬರುವ ಎರಡೂ ನಿಷಾದ ಪ್ರಯೋಗಗಳು. ಮೇಲಿನ ಆರೋಹಣದಲ್ಲಿ 'ಪ ನಿ' ಎಂಬುದನ್ನು ಕೈಶಿಕಿನಿಷಾದದಿಂದಲೂ, 'ಧ ನಿ ಸ' ಎಂಬುದನ್ನು ಕಾಕಲಿನಿಷಾದದಿಂದಲೂ ಹಾಡಬೇಕು. ೨೯ನೇ ಮೇಲ ಧೀರಶಂಕರಾಭರಣವೇ ಇದರ ಜನಕ ರಾಗ ಎಂಬುದು ಹಲವರ ಅಭಿಪ್ರಾಯ.

ಈ ರಾಗವು ಪುರಾತನ ರಾಗ. ಭಾಷಾಂಗ ರಾಗ. ಈ ರಾಗವನ್ನು ಹಾಡುವುದಕ್ಕೆ ತುಂಬಾ ಅನುಭವಸ್ಥರೇ ಸೂಕ್ತ. ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಷಡ್ಜ, ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪಂಚಮ, ಚತುಶ್ರುತಿ ಧೈವತ, ಕೈಶಿಕಿ ನಿಷಾದ ಮತ್ತು ಕಾಕಲಿ ನಿಷಾದಗಳು.