Saturday, October 3, 2009

ದಿವಾಕರತನುಜಂ

ದಿವಾಕರತನುಜಂ

ರಾಗ: ಯದುಕುಲಕಾಂಭೋಜಿ
ತಾಳ: ಏಕತಾಳ

ಪಲ್ಲವಿ:
||ದಿವಾಕರತನುಜಂ ಶನೈಶ್ಚರಂ||
||ಧೀರತರಂ ಸಂತತಂ ಚಿಂತಯೇಹಂ||

ಅನುಪಲ್ಲವಿ:
||ಭವಾಂಬುನಿಧೌನಿ ಮಗ್ನ ಜನಾನಾಂ, ಭಯಂಕರಂ ಅತಿಕ್ರೂರಫಲದಂ||
||ನೀಲಾಂಶುಕ ಪುಷ್ಪಮಾಲಾವೃತಂ ನೀಲರತ್ನ ಭೂಷಣಾಲಂಕೃತಂ||


ಚರಣ: 
||ಕಾಲಾಂಜನ ಕಾಂತೆಯುಕ್ತದೇಹಂ ಕಾಲಸಹೋದರಂ ಕಾಕವಾಹನಂ||
||ನೀಲಾಂಕುಶ ಪುಷ್ಪಮಾಲಾವೃತಂ ನೀಲರತ್ನ ಭೂಷಣಾಲಂಕೃತಂ||
||ಮಾಲಿನೀ ವಿನುತ ಗುರುಗುಹಮುದಿತಂ ಮಕರ ಕುಂಭರಾಶಿನಾಥಂ||
||ತಿಲತೈಲ ಮಿಶ್ರಿತಾನ್ನ ದೀಪಪ್ರಿಯಂ ದಯಾಸುಧಾಸಾಗರಂ ನಿರ್ಭಯಂ||
||ಕಾಲದಂಡ ಪರಿಪೀಡಿತ ಜಾನುಂ ಕಾಮಿತಾರ್ಥಫಲದ ಕಾಮಧೇನುಂ||
||ಕಾಲಚಕ್ರ ಭೇಧ ಚಿತ್ರಭಾನುಂ ಕುಲ್ಪಿತಚ್ಛಾಯಾದೇವಿ ಸುತಂ||

ತಾತ್ಪರ್ಯ:
ಸೂರ್ಯಪುತ್ರನೂ, ಧೀರನೂ, ಆದ ಶನೀಶ್ಚರನನ್ನು ಸತತ ಧ್ಯಾನ ಮಾಡುವೆ. ಸಂಸಾರ ಸಾಗರದಲ್ಲಿ ಮುಳುಗುವವರಿಗೆ ಭಯಂಕರನೂ, ಕ್ರೂರವಾದ ಫಲಗಳನ್ನು ಕೊಡುವವನೂ ಆದ ನೀನು, ಹೇ! ಶನೀಶ್ಚರ! ದೇವರ ಕಟಾಕ್ಷಕ್ಕೆ ಬಿದ್ದ ಭಕ್ತರ ಪಾಲಿಗೆ ಶುಭಫಲಗಳನ್ನು ಕೊಡುವವನಾಗಿದ್ದೀಯೆ! ನಿನ್ನನ್ನು ಸದಾ ಧ್ಯಾನಿಸುವೆ.

ಕಾಡಿಗೆಯಂತೆ ಕಪ್ಪಾದ ದೇಹವುಳ್ಳವನು ನೀನು. ಯಮಧರ್ಮನ ಸಹೋದರ. ಕಾಕವಾಹನ. ನೀಲಿಬಣ್ಣದ ವಸ್ತ್ರ ಉಟ್ಟು ಪುಷ್ಪಗಳಿಂದ ಆವೃತನಾಗಿರುವೆ. ರತ್ನಾಭರಣ ಭೂಷಿತನಾಗಿರುವೆ. ಮಾಲಿನಿಯಿಂದ ಸ್ತುತಿಸಲ್ಪಡುವವನೂ, ಗುರುಗುಹ ಸಂತೋಷನೂ ಆಗಿರುವೆ. ಮಕರ ಕುಂಭ ರಾಶಿಗಳಿಗೆ ಒಡೆಯ ನೀನು. ಎಳ್ಳೆಣ್ಣೆಯ ದೀಪ ಮತ್ತು ಅನ್ನ ನಿನಗೆ ಪ್ರಿಯ. ದಯಾಸಾಗರನಾದ ಭಗವನ್! ಸದಾ ನಿನ್ನ ಧ್ಯಾನವೇ ನನಗೆ. ಯಮದಂಡದಿಂದ ಗಾಯಗೊಂಡ ಮಂಡಿಯುಳ್ಳವನೂ, ಇಷ್ಟಾರ್ಥಗಳನ್ನು ಕರುಣಿಸುವ ಕಾಮಧೇನುವೂ ಆಗಿರುವೆ. ಕಾಲಚಕ್ರವನ್ನು ಭೇದಿಸಿವ ಸೂರ್ಯ-ಛಾಯಾದೇವಿಯರ ಸುತನೂ ಆದ ಶನೀಶ್ಚರ! ನಿನ್ನನ್ನು ಸದಾ ಧ್ಯಾನ ಮಾಡುವೆ.

ಯದುಕುಲಕಾಂಭೋಜಿ ರಾಗ ಲಕ್ಷಣ
ಆರೋಹಣ: ಸ ರಿ ಮ ಪ ಧ ಸ
ಅವರೋಹಣ: ಸ ನಿ ಧ ಪ ಮ ಗ ರಿ ಸ

ಈ ರಾಗವು ೨೮ನೇ‌ಮೇಳ ಹರಿಕಾಂಭೋಜಿಯಲ್ಲಿ ಜನ್ಯ. ಈ ರಾಗದಲ್ಲಿ ಷಡ್ಜ-ಪಂಚಮಗಳೊಂದಿಗೆ ಬರುವ ಸ್ವರಸ್ಥಾನಗಳು: ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ಧೈವತ ಮತ್ತು ಕೈಶಿಕಿ ನಷಾದ. ಕಾಂಭೋಜಿ ರಾಗದಂತೆ ಈ ರಾಗದಲ್ಲಿ ಕೂಡ ಕೆಲವು ಪ್ರಯೋಗಗಳಲ್ಲಿ ಕಾಕಲಿ ನಿಷಾದವು ಬರುತ್ತದೆ. ಔಡವ ಸಂಪೂರ್ಣರಾಗ. ಭಾಷಾಂಗ ರಾಗ. ಕಾಕಲಿ ನಿಷಾದ ಅನ್ಯಸ್ವರ. ಸಾ ನಿ ಪಾ ಧ ಸಾ ಎಂಬ ಪ್ರಯೋಗದಲ್ಲಿ ಕಾಕಲಿ ನಿಷಾದವು ಬರುತ್ತದೆ. ಸಾ ಪ ಧಾ ಸಾ - ಸ ರಿ ಗ ಮ ಸಾ - ಸ ರಿ ಮಾ ಮಾ - ಗ ಮ ಪಾ ಪಾ - ಮ ಪ ಧಾ ಧಾ - ಮಾ ಪ ಧ ಸಾ - ಮುಂತಾದ ಪ್ರಯೋಗಗಳು ರಂಜಕವಾಗಿರುತ್ತದೆ. ತುಂಬಾ ಅನುಭವಸ್ಥರಿಂದ ಕೇಳಬೇಕು. ಯಾವಾಗಲೂ ಹಾಡಬಹುದು. ಆದರೂ ರಾತ್ರಿ ಹಾಡುವುದಕ್ಕೆ ತುಂಬಾ ರಂಜನೆಯುಳ್ಳದ್ದಾಗಿರುತ್ತದೆ. ಭಕ್ತಿ ಮತ್ತು ಕರುಣಾ ರಸ ಪ್ರಧಾನ ರಾಗ.

Friday, October 2, 2009

ಶ್ರೀ ಶುಕ್ರಭಗವಂತಂ

ಶ್ರೀ ಶುಕ್ರಭಗವಂತಂ

ರಾಗ: ಘರಜ್
ತಾಳ: ಅಟತಾಳ

ಪಲ್ಲವಿ:
||ಶ್ರೀಶುಕ್ರ ಭಗವಂತಂ ಚಿಂತಯಾಮಿ||
|| ಸಂತತಂ ಸಕಲ ತತ್ವಜ್ಞಂ||

ಅನುಪಲ್ಲವಿ:
||ಹೇ ಶುಕ್ರಭಗವನ್ ಮಾಂ ಆಶು ಪಾಲಯ, ವೃಷ ತುಲಾಧೀಶ ದೈತ್ಯ||‌
||ಹಿತೋಪದೇಶ, ಕೇಶವಕಟಾಕ್ಷೈಕನೇತ್ರಂ ಕಿರೀಟಧರಂ ಧವಳಗಾತ್ರಂ||

ಚರಣ:
||ವಿಂಶತಿ ವತ್ಸರೋಡುದಶಾವಿಭಾಗಮಷ್ಟವರ್ಗಂ||
||ಕವಿಂ ಕಳತ್ರಕಾರಕಂ ರವಿನಿರ್ಜರ ಗುರುವೈರಿಣಂ||
||ನವಾಂಶ ಹೋರಾದ್ರೇಕ್ಕಾಣಾದಿ ವರ್ಗೋತ್ತಮಾವಸರಸಮಯೇ||
||ವಕ್ರೋಚ್ಚನೀಚ ಸ್ವಕ್ಷೇತ್ರವರಕೇಂದ್ರ ಮೂಲತ್ರಿಕೋಣೇ||
||ತ್ರಿಂಶಾಂಶಷಷ್ಟ್ಯಾಂಶೈರಾವತಾಂಶ ಪಾರಿಜಾತಾಂಶ ಗೋಪುರಾಂಶ||
||ರಾಜಯೋಗಕಾರಕಂ ರಾಜ್ಯಪ್ರದಂ ಗುರುಗುಹಮುದಂ||

ತಾತ್ಪರ್ಯ:
ಸಕಲ ತತ್ವಜ್ಞನಾದ ಶ್ರೀ ಶುಕ್ರಭಗವಂತನನ್ನು ಸದಾ ಧ್ಯಾನಿಸುವೆ. ಹೇ! ವೃಷಭ ತುಲಾರಾಶಿಗಳ ಅಧಿಪನೇ! ಅಸುರಾಚಾರ್ಯನೇ! ಶುಕ್ರಾಚಾರ್ಯನೇ ನನ್ನನ್ನು ರಕ್ಷಿಸು.

ಭಗವಂತನ ಕೃಪಾದೃಷ್ಟಿಗೆ ಪಾತ್ರನಾದವನೂ, ಒಂದೇ ಕಣ್ಣುಳ್ಳವನೂ, ಕಿರೀಟಧಾರಿಯೂ ಬಿಳುಪಾದ ಬಣ್ಣವುಳ್ಳವನೂ, ಆದ ನೀನು ನನ್ನನ್ನು ಕಾಪಾಡು. ಹೇ‌ಭಗವನ್! ನೀನು ಉಡುದೆಶೆಯಲ್ಲಿ ಇಪ್ಪತ್ತು ವರ್ಷ ದಶಾಕಾಲವನ್ನು ಹೊಂದಿರುವೆ. ಅಷ್ಟವರ್ಗವುಳ್ಳವನೂ, ಕ್ರಾಂತಿದರ್ಶಿಯೂ ಆಗಿರುವೆ. ಪತ್ನಿಕಾರಕ ನೀನು. ಸೂರ್ಯ, ಗುರು ಗ್ರಹಗಳಿಗೆ ಶತ್ರು. ನವಾಂಶ, ಹೋರಾ, ದ್ರೇಕ್ಕಾಣ ಮೊದಲಾದ ವರ್ಗೋತ್ತಮ ಕಾಲದಲ್ಲಿ ವಕ್ರ, ಉಚ್ಚ, ನೀಚಸ್ಥಿತಿ, ಸ್ವಕ್ಷೇತ್ರ, ಕೇಂದ್ರ, ಮೂಲತ್ರಿಕೋನಗಳಲ್ಲಿ ತ್ರಿಂಶಾಂಶ, ಷಷ್ಟ್ಯಂಶ, ಐರಾವತಾಂಶ, ಪಾರಿಜಾತಾಂಶ, ಗೋಪ್ರರಾಂಶಗಳಿಂದ ರಾಜಯೋಗವನ್ನುಂಟು ಮಾಡುವ, ರಾಜ್ಯದಾಯಕನೂ, ಗುರುಗುಹನಿಗೆ ಸಂತಸವನ್ನೀಯುವ ಹ್R ಭಗವನ್! ಕಾಪಾಡು!

ಘರಜ್ ರಾಗ ಲಕ್ಷಣ:
ಆರೋಹಣ: ಸ ರಿ ಗ ಮ ಧ ನಿ ಸ
ಅವರೋಹಣ: ಸ ನಿ ಧ ಪ ಮ ಗ ರಿ ಸ

ಘರಜ್ ರಾಗವು ೧೫ನೇ ಮೇಳರಾಗದಲ್ಲಿ ಜನ್ಯ. ಉಪಾಂಗ, ದೇಶೀಯ, ರಕ್ತಿರಾಗ. ಷಾಡವ ಸಂಪೂರ್ಣರಾಗ. ಗಾಂಧಾರ, ಮಧ್ಯಮ, ಜೀವಸ್ವರಗಳು. ಗಾಂಧಾರ ನ್ಯಾಸಸ್ವರ. ಸ ಗಾ ಮ ಪ ಮ ಧ ನಿ ಸ - ಸ ನಿ ಧ ಪ ಮ - ಮ ನಿ ಧ ಪ ಮ ಗ ಮ ಪ - ಸ* ನಿ ಧ ಪ ಮ ಪ ಗ ಮ - ಮ ನಿ ಧ ಮ ಗ ರಿ ಗ ಮ - ಧಾ ಧ ನಿ ಸ* ರಿ* ಸ* - ನಿ ಗ* ರಿ* ಸ* - ನಿ ಸ* ನಿ ಧ ಸ* - ಧ ಸ* ನಿ ಧ ಪ ಮ ಪ ಗ ಗ ಮ ನಿ ಧ ಮ ಗಾ ರಿ - ಮುಂತಾದ ಪ್ರಯೋಗಗಳು ರಂಜಕವಾಗಿರುತ್ತದೆ. ಈ ರಾಗದಲ್ಲಿ ಅನೇಕ ಜಾವಳಿಗಳು ಮತ್ತಿ ತಿಲ್ಲಾನಗಳಿವೆ. ಕೇಳಿ ಅನುಭವದಿಂದ ಕಲಿಯಬೇಕಾದ ರಾಗ. ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಷಡ್ಜ, ಶುದ್ಧ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪಂಚಮ, ಶುದ್ಧ ಧೈವತ, ಕಾಕಲಿ ನಿಷಾದ.

Thursday, October 1, 2009

ಬೃಹಸ್ಪತೇ

ಬೃಹಸ್ಪತೇ

ರಾಗ: ಅಠಾಣ.
ತಾಳ: ತ್ರಿಪುಟತಾಳ (ತ್ರಿಶ್ರಜಾತಿ)

ಪಲ್ಲವಿ:
||ಬೃಹಸ್ಪತೇ ತಾರಾಪತೇ ಬ್ರಹ್ಮಜಾತೇ ನಮೋಸ್ತುತೇ||

ಅನುಪಲ್ಲವಿ:
||ಮಹಾಬಲವಿಭೋ ಗೀಷ್ಪತೇ ಮಂಜುಧನುರ್ಮೀನಾಧಿಪತೇ||
||ಮಹೇಂದ್ರಾದ್ಯುಪಾಸಿತಾಕೃತೇ ಮಾಧವಾದಿವಿನುತಧೀಮತೇ||

ಚರಣ:
||ಸುರಾಚಾರ್ಯವರ್ಯ ವಜ್ರಧರ, ಶುಭಲಕ್ಷಣ ಜಗತ್ರಯಗುರೋ||‌
||ಜರಾದಿ ವರ್ಜಿತಕ್ರೋಧ, ಕಚಜನಕಾಶೃತಜನಕಲ್ಪತರೋ||
||ಪುರಾರಿಗುರುಗುಹ ಸಮ್ಮೋದಿತ, ಪುತ್ರಕಾರಕ ದೀನಬಂಧೋ||
||ಪರಾದಿ ಚತ್ವಾರಿವಾ ಕ್ಸ್ವ ರೂಪಪ್ರಕಾಶಕ ದಯಾಸಿಂಧೋ||
||ನಿರಾಮಯಾಯ ನೀತಿಕರ್ತ್ರೇ, ನಿರಂಕುಶಾಯ ವಿಶ್ವಭರ್ತ್ರೇ||‌
||ನಿರಂಜನಾಯ ಭುವನಭೋಕ್ತ್ರೇ, ನಿರಂಶಾಯ ಸುಖಪ್ರದಾತ್ರೇ||‌

ತಾತ್ಪರ್ಯ:
ನಕ್ಷತ್ರಾಧಿಪನೇ! ಬ್ರಹ್ಮಕುಲಜನಾದ ಬೃಹಸ್ಪತಿಯೇ!‌ನಿನಗೆ ನಮಸ್ಕಾರ! ನೀನು ಮಹಾಬಲಿಷ್ಟನೂ ಸರ್ವ ಶೇಷ್ಠನೂ, ಧನಸ್ಸು ಮತ್ತು ಮೀನರಾಶಿಗಳ ಅಧಿಪತಿಯೂ ಆಗಿದ್ದೀಯೆ. ಇಂದ್ರಾದಿಗಳು ನಿನ್ನನ್ನು ಪೂಜಿಸುತ್ತಾರೆ. ವಿಷ್ಣುವೇ‌ಮೊದಲಾದ ದೇವರುಗಳು ನಿನ್ನನ್ನು ಸ್ತುತಿಸುತ್ತಾರೆ. ಮಹಾ ಪ್ರಾಜ್ಞನಾದ ನಿನ್ನನ್ನು ನಮಸ್ಕರಿಸುತ್ತಾರೆ.

ಸುರಗುವಾದ ನೀನು ಸರ್ವಲಕ್ಷಣ ಸಂಪನ್ನನಿರುವೆ. ತ್ರಿಲೋಕಗಳಿಗೆ ಗುರುವೂ, ಮುಪ್ಪು, ಮರಣವಿಲ್ಲದವನೂ ಆಗಿರುವೆ. ಕ್ರೋಧರಹಿತನೂ, ಕಚನ ತಂದೆಯೂ, ಆಶ್ರಿತ ಜನರಿಗೆ ಕಲ್ಪವೃಕ್ಷದಂತೆಯೂ ಆಗಿರುವೆ. ಶಿವಗುರುಗುಹರ ಸಂತೋಷಕ್ಕೆ ಪಾತ್ರನಾಗಿರುವೆ. ಪುತ್ರಭಾಗ್ಯವನ್ನು ಕರುಣಿಸುವೆ ನೀನು. ಚತುರ್ವಿಧವಾಕ್ಪ್ರವಾಹನೂ, ಪ್ರಕಾಶಪಡಿಸಿದವನೂ, ಅನಾಥರಕ್ಷಕನೂ, ದಯಾಸಾಗರನೂ, ಆದ ನಿನಗೆ ನಮಸ್ಕರಿಸುವೆ. ರೋಗರಹಿತನೂ, ನೀತಿಬೋಧಕನೂ, ಸ್ವತಂತ್ರನೂ ಆಗಿರುವೆ. ದೋಷರಹಿತನೂ, ವಿಶ್ವದ ನಾಯಕನೂ, ಲೋಕರಕ್ಷಕನೂ ಆಗಿರುವೆ. ಪೂರ್ಣನೂ ಯಜ್ಞರಕ್ಷಕನೂ ಆಗಿರುವ ಬೃಹಸ್ಪತಿಯೇ! ನಿನಗೆ ನಮೋನಮಃ

ಅಠಾಣ ರಾಗಲಕ್ಷಣ
ಆರೋಹಣ: ಸ ರಿ ಮ ಪ ನಿ ಪ ಧ ನಿ ಸ
ಅವರೋಹಣ: ಸ ನಿ ಸ ಧಾ ಪ ಮ ಪ ಗಾ ರಿ ಸ

ಈ ರಾಗಕ್ಕೆ ಆರೋಹಣ ಅವರೋಹಣಗಳು ಒಂದೇ ವಿಧವಾಗಿಲ್ಲ ಮತ್ತು ೨೯ನೇ‌ಮೇಳಕರ್ತ ರಾಗದ ಜನ್ಯವೆಂದೆ ಕೆಲವರೂ, ೨೮ನೇ ಮೇಳದಲ್ಲಿ ಜನ್ಯವೆಂದು ಕೆಲವರೂ ಅಭಿಪ್ರಾಯ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಈ ರಾಗದಲ್ಲಿ ಬರುವ ಎರಡೂ ನಿಷಾದ ಪ್ರಯೋಗಗಳು. ಮೇಲಿನ ಆರೋಹಣದಲ್ಲಿ 'ಪ ನಿ' ಎಂಬುದನ್ನು ಕೈಶಿಕಿನಿಷಾದದಿಂದಲೂ, 'ಧ ನಿ ಸ' ಎಂಬುದನ್ನು ಕಾಕಲಿನಿಷಾದದಿಂದಲೂ ಹಾಡಬೇಕು. ೨೯ನೇ ಮೇಲ ಧೀರಶಂಕರಾಭರಣವೇ ಇದರ ಜನಕ ರಾಗ ಎಂಬುದು ಹಲವರ ಅಭಿಪ್ರಾಯ.

ಈ ರಾಗವು ಪುರಾತನ ರಾಗ. ಭಾಷಾಂಗ ರಾಗ. ಈ ರಾಗವನ್ನು ಹಾಡುವುದಕ್ಕೆ ತುಂಬಾ ಅನುಭವಸ್ಥರೇ ಸೂಕ್ತ. ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಷಡ್ಜ, ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪಂಚಮ, ಚತುಶ್ರುತಿ ಧೈವತ, ಕೈಶಿಕಿ ನಿಷಾದ ಮತ್ತು ಕಾಕಲಿ ನಿಷಾದಗಳು.

Wednesday, August 26, 2009

ಬುಧಮಾಶ್ರಯಾಮಿ

ಬುಧಮಾಶ್ರಯಾಮಿ

ರಾಗ: ನಾಟಕುರಂಜಿ.
ತಾಳ: ಮಿಶ್ರಜಾತಿ ಝಂಪೆತಾಳ

ಪಲ್ಲವಿ:
||ಬುಧಮಾಶ್ರಯಾಮಿ ಸತತಂ||
||ಸುರವಿನುತಂ, ಚಂದ್ರತಾರಾಸುತಂ|| (ಬುಧ)

ಅನುಪಲ್ಲವಿ:
||ಬುಧಜನೈರ್ವೇದಿತಂ ಭೂಸುರೈರ್ಮೋದಿತಂ||
||ಮಧುರ ಕವಿತಾಪ್ರದಂ ಮಹನೀಯ ಸಂಪದಂ || (ಬುಧ)

ಚರಣ:
||ಕುಂಕುಮ ಸಮದ್ಯುತಿಂ, ಗುರುಗುಹಮುದಾಕೃತಿಂ||
||ಕುಜವೈರಿಣಂ ಮಣಿ ಮಕುಟಹಾರ ಕೇಯೂರ ಕಂಕಣಾಧಿಧರಣಂ||
||ಕಮನೀಯತರ ಮಿಥುನ ಕನ್ಯಾಧಿಪಂ ಪುಸ್ತಕಕರಂ ನಪುಂಸಕಂ||
||ಕಿಂಕರ ಜನಮಹಿತಂ ಕಿಲ್ಬಷಾದಿರಹಿತಂ||‌
||ಶಂಕರ ಭಕ್ತಹಿತಂ ಸದಾನಂದಸಹಿತಂ|| (ಬುಧ)

ತಾತ್ಪರ್ಯ:
ದೇವತೆಗಳಿಂದ ಪೂಜಿಸಲ್ಪಡುವವನೂ, ಚಂದ್ರ ಮತ್ತು ತಾರಾಪುತ್ರನಾದ ಬುಧನನ್ನು ಆಶ್ರಯಿಸುತ್ತೇನೆ. ಪಂಡಿತೋತ್ತಮರಿಂದಲೇ ತಿಳಿಯಲು ಸಾಧ್ಯನಾದ, ಬ್ರಾಹ್ಮಣರಿಂದ ಸಂತಸಗೊಂಡ, ಮಧುರವಾದ ಕವಿತೆಗಳನ್ನು ರಚಿಸಲು ಶಕ್ತಿ ಕೊಡುವ, ಪೂಜ್ಯವಾದ ಸಂಪತ್ತುಳ್ಳ ಬುಧನನ್ನು ಆಶ್ರಯಿಸುತ್ತೇನೆ. ಕೇಸರಿಬಣ್ಣವುಳ್ಳ, ಗುರುಗುಹನ ಸಂತೋಷವೇ ಮೂರ್ತಿವೆತ್ತಂತಿರುವ, ಅಂಗಾರಕ ಶತ್ರುವೂ, ರತ್ನ ಕಿರೀಟ, ಮುತ್ತಿನಹಾರ, ತೋಳುಬಳೆಗಳಿಂದ ಅಲಂಕೃತನಾದ, ಮಿಥುನ-ಕನ್ಯಾ ರಾಶಿಗಳ ಅಧಿಪತಿಯಾದ, ಪುಸ್ತಕಧಾರಿಯೂ, ನಪುಂಸಕನೂ ಆದ ಬುಧನನ್ನು ಆಶ್ರಯಿಸುತ್ತೇನೆ. ಪಾಪಸಂಬಂಧವಿಲ್ಲದವನೂ, ಸೇವಕರಿಂದ ಸ್ತುತಿಸಲ್ಪಟ್ಟವನೂ, ಭಕ್ತ ಜನಮಂದಾರನೂ, ಸದಾ ಆನಂದದಿಂದಿರುವವನೂ ಆದ ಬುಧನನ್ನು ಆಶ್ರಯಿಸುತ್ತೇನೆ.

ನಾಟಕುರಂಜಿ ರಾಗಲಕ್ಷಣ:
ಆರೋಹಣ: ಸ ರಿ ಗ ಮ ದ ನಿ ಪ ದ ನಿ ಸ
ಅವರೋಹಣ: ಸ ನಿ ದ ಮ ಗ ಸ ಅಥವಾ ಸ ನಿ ದ ಮ ಗ ಮ ಪ ಗ ರಿ ಸ

ಈ ರಾಗವು ೨೮ನೇ ಮೇಳ ಹರಿಕಾಂಬೋಜಿಯಲ್ಲಿ ಜನ್ಯ. ಷಡ್ಜ ಮತ್ತು ಪಂಚಮಗಳೊಂದಿಗೆ ಈ ರಾಗದಲ್ಲಿರುವ ಸ್ವರಸ್ಥಾನಗಳು: ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತು (ಶೃತಿ) ಶ್ರುತಿ ಧೈವತ, ಕೈಶಿಕಿ ನಿಷಾದ.

ಉಪಾಂಗ ರಾಗ. ಗಾಂಧಾರ, ಮಧ್ಯಮ ಮತ್ತು ಧೈವತಗಳು ರಾಗಚ್ಛಾಯಾಸ್ವರಗಳು. ಯಾವಾಗಲೂ ಹಾಡಬಹುದು. ಈ ರಾಗವನ್ನು ತುಂಬಾ ಅನುಭವಸ್ಥರಿಂದ ಕೇಳಬೇಕು.


Thursday, August 13, 2009

ಕೊಳಲು - ಒಂದಿಷ್ಟು ಮಾಹಿತಿ

ಕೊಳಲು

ಇಂದು ಕೃಷ್ಣ ಜನ್ಮಾಷ್ಟಮಿ, ಹಾಗಾಗಿ ಕೊಳಲಿನ ಬಗ್ಗೆ ಒಂದಿಷ್ಟು ಮಾಹಿತಿ ಕೊಡಲು ನನ್ನ ಪ್ರಯತ್ನ.

ಸಾಮಾನ್ಯವಾಗಿ ಕೊಳಲು ಎಲ್ಲರಿಗೂ ಪರಿಚಿತ. ಇದು ಸುಷಿರ ಅಥವಾ ಗಾಳಿ ವಾದ್ಯಗಳ ಗುಂಪಿಗೆ ಸೇರಿದ್ದು. ಶ್ರೀ ಕೃಷ್ಣನಲ್ಲಿ ಶೋಭಿಸುತ್ತಿದ್ದ ಮಹಾನ್ ವಾದ್ಯವಿದು. ಇದು ಒಂದು ಸಣ್ಣ ಕೊಳವೆಯಂತಿದ್ದು ಸುಮಾರು ೧೪ ಅಂಗುಲ ಉದ್ದ ಮತ್ತು ವ್ಯಾಸವು ಶೃತುಗೆ ಅನುಗುಣವಾಗಿ ವ್ಯತ್ಯಾಸಗೊಳ್ಳು ತ್ತದೆ. ಕೊಳವೆಯ ಒಳ ಭಾಗ ಟೊಳ್ಳಾಗಿದ್ದು ಊದಲು ಒಂದು ರಂಧ್ರ (ಮುಖ ರಂಧ್ರ), ನುಡಿಸಲು ೮ ರಂಧ್ರಗಳು ಒಂದೇ ಪಾರ್ಶ್ವದಲ್ಲಿ ಕಂಡು ಬರುತ್ತದೆ. ಮುಖ ರಂಧ್ರದ ಹತ್ತಿರದ ತುದಿಯನ್ನು ಮುಚ್ಚಲಾಗಿದ್ದು ಮತ್ತೊಂದು ತುದಿ ತೆರೆದಿರುತ್ತದೆ. ಮುಖರಂಧ್ರವನ್ನು ೩/೪ ಅಂಗುಲದಷ್ಟು ಅಂತರದಲ್ಲಿ ಕೊರೆಯಲಾಗಿರುತ್ತದೆ. ತಾರ ರಂಧ್ರವು ತಾರ ಷಡ್ಜವನ್ನು ಮೂಡಿಸುತ್ತದೆ. ನುಡಿಸುವ ರಂಧ್ರಗಳು ಮುಖರಂಧ್ರಕ್ಕಿಂತ ವ್ಯಾಸದಲ್ಲಿ ಚಿಕ್ಕದಾಗಿರುತ್ತದೆ ಹಾಗೂ ಮೊನಚಾಗಿರುತ್ತದೆ. ತುಟಿಯು ಮತ್ತು ಬೆರಳುಗಳ ಚಾಲನೆಯಿಂದ ಸ್ವರಗಳ ಗಮಕವನ್ನು ನಿರ್ವಹಿಸಲಾಗುತ್ತದೆ. ವಿಕೃತಿ ಸ್ವರ ಪ್ರಭೇದಗಳನ್ನು ಆಯಾ ಸ್ವರದ ರಂಧ್ರದಲ್ಲೇ ಬೆರಳುಗಳ ಚಾಲನೆಯಿಂದಲೂ ಹಾಗೂ ಗಾಳಿಯ ಒತ್ತಡದಿಂದಲೂ ಸ್ಪುರಿಸಲಾಗುತ್ತದೆ.

ಕೊಳಲನ್ನು ಬಲಗಡೆಗೆ ಅಡ್ಡವಾಗಿ ಹೆಬ್ಬೆಟ್ಟುಗಳ ಆಧಾರದ ಮೇಲೆ ಹಿಡಿದುಕೊಂಡು, ಕೆಳತುಟಿಯ ಸಮೀಪದಲ್ಲಿಟ್ಟು ಮುಖ ರಂಧ್ರದ ಮೂಲಕ ಊದಲಾಗುತ್ತದೆ. ಬಲಗೈಯ ನಾಲ್ಕು ಬೆರಳುಗಳು ಹಾಗೂ ಎಡಗೈಯ ಮೂರು ಬೆರಳುಗಳಿಂದ ರಂಧ್ರಗಳನ್ನು ತೆರೆದು, ಮುಚ್ಚುವುದರಿಂದ ಆಯಾ ಸ್ವರಗಳನ್ನು ಹೊರಡಿಸಲಾಗುತ್ತದೆ. ಈ ವಾದ್ಯದಲ್ಲಿ ಎರಡೂವರೆ ಸ್ಥಾಯಿಗಳಷ್ಟೇ ವ್ಯಾಪ್ತವಿದ್ದು, ಹೆಚ್ಚಿನ ವ್ಯಾಪ್ತಿಗೆ ಕೊಳಲನ್ನೇ ಬದಲಾಯಿಸಬೇಕಾಗುತ್ತದೆ. ಬಿದಿರು, ರಕ್ತ ಚಂದನ ಮತ್ತು ಇಬೋನಿ ಮರಗಳಿಂದ ಕೊಳಲು ತಯಾರಿಸಬಹುದಾದರೂ ಬಿದಿರಿನ ಕೊಳಲು ಮಾತ್ರ ಮಧುರವಾದ ತುಂಬುನಾದವನ್ನು ಮೂಡಿಸಬಲ್ಲದು. ಸುಪ್ರಸಿದ್ಧ ವಿದ್ವಾಂಸ ಟಿ. ಆರ್. ಮಹಾಲಿಂಗಂ ಅವರು ಈ ವಾದ್ಯಕ್ಕೆ ಒಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿದುದಲ್ಲದೇ ಅನೇಕ ತಂತ್ರಗಳನ್ನು ಉಪಯೋಗಿಸಿ ಗಾಯನ ಶೈಲಿಯನ್ನು ಅನುಸರಿಸುತ್ತಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ.

Tuesday, August 11, 2009

ಅಂಗಾರಕಂ

ಅಂಗಾರಕಂ

ಇಂದು ಮಂಗಳವಾರ.
ಈ ದಿನ ನೆನಪಾದದ್ದು ದೀಕ್ಷಿತರ 'ಅಂಗಾರಕಂ' ಕೃತಿ.
ಈ ಕೃತಿಯ ಸಾಹಿತ್ಯ ತಂದೆಯವರ ಸಂಗೀತ ಪುಸ್ತಕದಲ್ಲಿತ್ತು.
(ನವಗ್ರಹ ಕೀರ್ತನೆಗಳು ತಂದೆಯವರ ಸಂಗೀತ ಪುಸ್ತಕದಲ್ಲಿದೆ).

ಈ ಕೃತಿ ಸುರುಟಿ ರಾಗದಲ್ಲಿದ್ದು, ರೂಪಕತಾಳದಲ್ಲಿದೆ.
ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.

ಪಲ್ಲವಿ:
||ಅಂಗಾರಕಮಾಶ್ರಯಾಮ್ಯಹಂ ವಿನತಾಶ್ರಿತಜನ ಮಂದಾರಂ||
||ಮಂಗಳವಾರಂ ವಾರಂ ವಾರಂ|| (ಅಂಗಾರಕಂ)

ಅನುಪಲ್ಲವಿ:
||ಶೃಂಗಾರಕ ಮೇಷವೃಶ್ಚಿಕ ರಾಶ್ಯಾಧಿಪತಿಂ||
||ರಕ್ತಾಂಗಂ ರಕ್ತಾಂಬರಾದಿಧರಂ ಶಕ್ತಿ ಶೂಲಧರಂ||
||ಮಂಗಳಂ ಕಂಬುಗಳಂ ಮಂಜುಳತರ ಪದಯಗಳಂ||
||ಮಂಗಳದಾಯಕ ಮೇಷತುರಂಗಂ ಮಕರೋತ್ತುಂಗಂ|| (ಅಂಗಾರಕಂ)

ಚರಣ:
||ದಾನವಸುರ ಸೇವಿತ ಮಂದಸ್ಮಿತ ವಿಲಸಿತವಕ್ತ್ರಂ||
||ಧರಣೀಪ್ರದಂ ಭ್ರಾತೃಕಾರಕಂ ರಕ್ತನೇತ್ರಂ||
||ದೀನರಕ್ಷಕಂ ಪೂಜಿತ ವೈದ್ಯನಾಥಕ್ಷೇತ್ರಂ||
||ದಿವ್ಯೌಘಾದಿ ಗುರುಗುಹ ಕಟಾಕ್ಷಾನುಗ್ರಹಪಾತ್ರಂ||
||ಭಾನುಚಂದ್ರ ಗುರುಮಿತ್ರಂ ಭಾಸಮಾನಸುಕಲತ್ರಂ||
||ಜಾನುಸ್ಥಹಸ್ತಚಿತ್ರಂ ಚತುರ್ಭುಜಂ ಅತಿವಿಚಿತ್ರಂ|| (ಅಂಗಾರಕಂ)

ತಾತ್ಪರ್ಯ:
ಭಕ್ತರಾದ ಆಶ್ರಿತಜನರಿಗೆ ಕಲ್ಪವೃಕ್ಷದಂತೆಯೂ, ಮಂಗಳವಾರಕ್ಕೆ ಅಧಿಪತಿಯೂ, ಭೂದೇವಿಯ ಕುಮಾರನೂ ಆದ ಅಂಗಾರಕನನ್ನು ಪುನಃ ಪುನಃ ಆಶ್ರಯಿಸುತ್ತೇನೆ.
ಮನೋಹರವಾದ ಮೇಷವೃಶ್ಚಿಕರಾಶ್ಯಾದಿಪತಿಯೂ, ಕೆಂಪು ಬಣ್ಣಾದ ಶರೀರವುಳ್ಳ ಕೆಂಪು ವಸ್ತ್ರ ಧರಿಸುವ, ಶಕ್ತಿ, ಶೂಲಾಯುಧಧಾರಿಯೂ, ಶಂಖದಂತಹ ಕತ್ತುಳ್ಳವನೂ, ಮನೋಹರ ಪಾದಗಳನ್ನುಳ್ಳವನೂ, ಮಂಗಳಕರನೂ ಆದ ಅಂಗಾರಕನನ್ನು ಆಶ್ರಯಿಸುತ್ತೇನೆ.
ದೇವದಾನವರಿಂದ ಸೇವಿಸಲ್ಪಡುವ ಮಂದಹಾಸ ಮೂಡಿರುವ ಮನೋಹರವಾದ ಮುಖವುಳ್ಳ, ಭೂಮಿಯನ್ನು ಕೊಡುವವನು, ಸಹೋದರಕಾರಕನೂ, ರಕ್ತನೇತ್ರನೂ, ದೀನರಕ್ಷಕನೂ, ವೈದ್ಯನಾಥಕ್ಷೇತ್ರದಲ್ಲಿ ವೆಶೇಷವಾಗಿ ಪೂಜಿಸಲ್ಪಡುವವನೂ, ಮಹಾಮಹಿಮ ಗುರುಗುಹ ಕಟಾಕ್ಷ ಅನುಗ್ರಹಗಳಿಗೆ ಪಾತ್ರನೂ ಆದ ಅಂಗಾರಕನನ್ನು ಪ್ರತಿಬಾರಿ ಆಶ್ರಯಿಸುತ್ತೇನೆ. ಸೂರ್ಯ ಚಂದ್ರ ಬೃಹಸ್ಪತಿಗಳಿಗೆ ಮಿತ್ರನೂ, ತೇಜಸ್ವ್ನೀ ಪತ್ನಿಯನ್ನು ಹೊಂದಿರುವವನೂ, ತೊಡೆಯಮೇಲೆ ಕೈಯಿಟ್ಟು, ಮನೋಹರವಾಗಿ ಕಾಣುವವನೂ, ಚತುರ್ಭುಜನೂ ಆದ ಅಂಗಾರಕನಿಗೆ ಪ್ರತಿಬಾರಿಯೂ ನಮಿಸಿ ಆಶ್ರಯ ಕೋರುತ್ತೇನೆ.

ಸುರುಟಿ ರಾಗದ ಲಕ್ಷಣ:
ಆರೋಹಣ:
ಸ ರಿ ಮ ಪ ನಿ ಸ
ಅವರೋಹಣ: ಸ ನಿ ದ ಪ ಮ ಗ ಪ ಮ ರಿ ಸ

ಈ ರಾಗವು ೨೮ನೇ ಮೇಳ ಹರಿಕಾಂಬೋಜಿಯಲ್ಲಿ ಜನ್ಯ. ಔಡವ-ವಕ್ರ ಸಂಪೂರ್ಣ ರಾಗ. ಆರೋಹಣದಲ್ಲಿ ಗಾಂಧಾರಧೈವತಗಳು ವರ್ಜ್ಯ. ಷಡ್ಜ ಮತ್ತು ಪಂಚಮಗಳೊಂದಿಗೆ ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಚತುಶೃತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತುಶೃತಿ ಧೈವತ ಮತ್ತು ಕೈಶಿಕಿ ನಿಷಾದ.

ಉಪಾಂಗ ರಾಗ. ರಿಷಭ, ಮಧ್ಯಮ, ನಿಷಾದಗಳು ರಾಗಚ್ಛಾಯಾಸ್ವರಗಳು. ಗಮಕರಾಗ. ದೇಶೀಯ ರಾಗ. ಮಂಗಳಕರವಾದ ರಾಗ. ಯಾವಾಗಲೂ ಹಾಡಬಹುದು.

ಈ ರಾಗದಲ್ಲಿರುವ ಕೆಲವು ಪ್ರಸಿದ್ಧ ರಚನೆಗಳು:
೧. ಗೀತಾರ್ಥಮು - ಆದಿತಾಳ - ತ್ಯಾಗರಾಜರು
೨. ಅಂಗಾರಕಂ - ರೂಪಕ - ಮುತ್ತುಸ್ವಾಮಿ ದೀಕ್ಷಿತರು
೩. ಶೃಗಾರಿಂಚುಕೊನಿ - ಆದಿತಾಳ - ತ್ಯಾಗರಾಜರ ನೌಕಾಚರಿತ್ರೆ ಗೀತ ನಾಟಕ ಕೃತಿ

Wednesday, August 5, 2009

ಚಂದ್ರಂಭಜ

ಚಂದ್ರಂಭಜ

ಇಂದು ಹುಣ್ಣಿಮೆ. ಆಗಸದಲ್ಲಿ ಚಂದ್ರನನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಚಂದ್ರಂಭಜ!’


ಅದೃಷ್ಟವಶಾತ್, ಈ ಕೃತಿ ತಂದೆಯವರ ಸಂಗೀತದ ಪುಸ್ತಕದಲ್ಲಿತ್ತು.
ಇದು ಅಸಾವೇರಿ ರಾಗದಲ್ಲಿದ್ದು, ಮಠ್ಯತಾಳದಲ್ಲಿದೆ.

ಆ ಕೃತಿ ಇಲ್ಲಿದೆ. ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.

ಪಲ್ಲವಿ:
||ಚಂದ್ರಂ ಭಜ ಮಾನಸ ಸಾಧುಹೃದಯಸದೃಶಂ|| (ಚಂದ್ರಂಭಜ)

ಅನುಪಲ್ಲವಿ:
||ಇಂದ್ರಾದಿ ಲೋಕಪಾಲೇಡಿತ ತಾರೇಶಂ||
||ಇಂದುಂ ಷೋಡಶಕಲಾಧರಂ ನಿಶಾಕರಂ||
||ಇಂದಿರಾ ಸಹೋದರಂ ಸುಧಾಕರ ಮನಿಶಂ|| (ಚಂದ್ರಂಭಜ)

ಚರಣ:
||ಶಂಕರಮೌಳಿ ವಿಭೂಷಣಂ ಶೀತಕಿರಣಂ||
||ಚತುರ್ಭುಜಂ ಮದನಚ್ಛತ್ರಂ ಕೃಪಾಕರಂ||
||ವೆಂಕಟೇಶನಯನಂ ವಿರಾಣ್ಮನೋವನಯನಂ||
||ವಿಧುಂ ಕುಮುದಮಿತ್ರಂ ವಿಧಿಗುರುಗುಹ ವಕ್ತ್ರಂ||
||ಶಶಾಂಕ ಗೀಶ್ಪತಿ ಶಾಪಾನುಗ್ರಹ ಪಾತ್ರಂ||
||ಶರಶ್ಚಂದ್ರಿಕಾ ಧವಳ ಪ್ರಕಾಶಗಾತ್ರಂ||
||ಕಂಕಣ ಕೇಯೂರಹಾರ ಮಕುಟಾದಿ ಧರಂ||
||ಪಂಕಜ ರಿಪು ರೋಹಿಣಿಪ್ರಿಯಕರ ಚತುರಂ|| (ಚಂದ್ರಂಭಜ)

ತಾತ್ಪರ್ಯ:
ಎಲೈ ಮನಸೇ! ಸತ್ಪುರುಷರ ಹೃದಯದಂತೆ ಪರಿಶುದ್ಧನಾದ ಚಂದ್ರನನ್ನು ಭಜಿಸು. ಇಂದ್ರಾದಿ ಲೋಕ ಪಾಲಕರಿಂದ ಸ್ತುತಿಸಲ್ಪಡುವ, ತಾರಾಧಿಪತಿಯಾದ ಹದಿನಾರು ಕಲೆಗಳನ್ನು ಹೊಂದಿರುವ, ರಾತ್ರಿಯನ್ನುಒಂಟುಮಾಡುವ, ಲಕ್ಷ್ಮಿಯ ಸೋದರನೂ, ಅಮೃತಕಿರಣನೂ ಆದ ಇಂದುವನ್ನು ಭಜಿಸು. ಚಂದ್ರನನ್ನು ಈಶ್ವರನು ತನ್ನ ತಲೆಯಲ್ಲಿ ಧರಿಸಿರುವನು. ನಾಲ್ಕು ಕೈಗಳುಳ್ಳ ಅವನ ಕಿರಣಗಳು ತಂಪು. ಮನ್ಮಥನಿಗೆ ಕೊಡೆಯಾಗಿರುವ ಚಂದ್ರನು ರಾತ್ರಿಕಾರಕ. ಪಾಪ ಪರಿಹಾರಕನಾದ ವಿಷ್ಣುವಿನ ಕಣ್ಣು ಚಂದ್ರ. ವಿಶ್ವರೂಪಿಯಾದ ವಿಷ್ಣುವಿನ ಹೃದಯದಲ್ಲಿ ಜನಿಸಿದವನು. ಕುಮುದಭಾಂಧವ, ಬ್ರಹ್ಮ ಮತ್ತು ಸುಬ್ರಹ್ಮಣ್ಯರ ಮುಖನಾದ ಆ ಚಂದ್ರನನ್ನು ಎಲೈ ಮನಸೇ! ಭಜಿಸು!

ಅಸಾವೇರಿ ರಾಗದ ಲಕ್ಷಣ
ಆರೋಹಣ:
ಸ ರಿ ಮ ಪ ದ ಸ
ಅವರೋಹಣ: ಸ ನಿ ಸ ಪ ದ ಮ ಪ ರಿ + ಗಾ ರಿ ಸ


ಈ ರಾಗವು ೮ನೇ ಮೇಳ ಹನುಮತೋಡಿಯಲ್ಲಿ ಜನ್ಯ. ಷಡ್ಜ ಮತ್ತು ಪಂಚಮಗಳೊಂದಿಗೆ ಈ ರಾಗದಲ್ಲಿ ಬರುವ ಸ್ವರ ಸ್ಥಾನಗಳು: ಶುದ್ಧ ರಿಷಭ, ಚತುಶೃತಿ ರಿಷಭ +, ಸಾಧಾರಣ ಗಾಂಧಾರ, ಶುದ್ಧ ಧೈವತ, ಕೈಶಿಕಿ ನಿಷಾದ


ಇದು ಔಡವ-ವಕ್ರ ಸಂಪೂರ್ಣ ರಾಗ. ಭಾಷಾಂಗ ರಾಗ. ಚತುಶೃತಿ ರಿಷಭವು ಅನ್ಯಸ್ವರ. ಇದು ರೀಮಪಾ, ರಿಮಪದಾಪ, ಮುಂತಾದ ರಿಷಭವೇ ಮೊದಲಾಗಿಯುಳ್ಳ ಪ್ರಯೋಗಗಳಲ್ಲಿ ಬರುತ್ತದೆ. ಕೆಲವು ಕೃತಿಗಳು ಅನ್ಯಸ್ವರಗಳಲ್ಲೇ ಆರಂಭವಾಗುತ್ತವೆ. ಉದಾ: ದೀಕ್ಷಿತರ 'ಚಂದ್ರಂಭಜ' ಮತ್ತು ತ್ಯಾಗರಾಜರ 'ಲೇಕನಾ' ಎಂಬ ಕೃತಿಗಳು. ಶುದ್ಧ ರಿಷಭ, ಸಾಧಾರಣ ಗಾಂಧಾರ ಮತ್ತು ಶುದ್ಧ ಧೈವತಗಳು ರಾಗಚ್ಛಾಯಾಸ್ವರಗಳು. ಗಾಂಧಾರಕ್ಕೆ ಕಂಪಿತವೆಂಬ ಗಮಕವು ಬರುತ್ತದೆ. 'ಗಾರಿಸಾ'ಎಂಬ ಪ್ರಯೋಗದಲ್ಲಿ ಗಾಂಧಾರವು ರಿಷಭವನ್ನು ಅನುಸರಿಸಿಯೇ ಇರುತ್ತದೆ. ಹೀಗೆಯೇ 'ಪಾನಿದಾಪ' ಎಂಬ ಪ್ರಯೋಗದಲ್ಲಿ ನಿಷಾದವು ಧೈವತವನ್ನು ಅನುಸರಿಸುತ್ತದೆ.


ಅಸಾವೇರಿ ರಾಗವು ಗಮಕ ಮತ್ತು ರಕ್ತಿ ರಾಗ. ಬೆಳಿಗ್ಗೆ ೯ ಘಂಟೆಯಿಂದ ಮಧ್ಯಾಹ್ನ ೧೨ಘಂಟೆಯವರೆಗೆ ಹಾಡಲು ಉತ್ತಮವಾದ ಕಾಲ. ಕರುಣಾರಸ ಪ್ರಧಾನವಾದ ರಾಗ.


ಈ ರಾಗದಲ್ಲಿರುವ ಕೆಲವು ಪ್ರಸಿದ್ಧ ರಚನೆಗಳು:
೧. ರಾರಾಮಾಯಿಂಟಿ - ಆದಿತಾಳ - ತ್ಯಾಗರಾಜರು
೨. ಲೇಕನಾನಿನ್ನು - ಆದಿತಾಳ - ತ್ಯಾಗರಾಜರು
೩. ಚಂದ್ರಂಭಜ - ಮಠ್ಯತಾಳ - ಮುತ್ತುಸ್ವಾಮಿ ದೀಕ್ಷಿತರು
೪. ಶರಣಶರಣ - ಆದಿತಾಳ - ಅರುಣಾಚಲಕವಿ